ನವದೆಹಲಿ, ಫೆ 12 : ಐತಿಹಾಸಿಕ ಅಯೋಧ್ಯೆ ರಾಮಜನ್ಮ ಭೂಮಿ ತೀರ್ಪು ನೀಡಿದ ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಾಧೀಶರಾಗಿದ್ದ ಕರ್ನಾಟಕದ ಎಸ್.ಅಬ್ದುಲ್ ನಜೀರ್ ಅವರನ್ನು ಆಂಧ್ರಪ್ರದೇಶ ರಾಜ್ಯದ ರಾಜ್ಯಪಾಲರಾಗಿ ನೇಮಕಮಾಡಲಾಗಿದೆ.
ಐತಿಹಾಸಿಕ ಅಯೋಧ್ಯೆ ರಾಮಜನ್ಮ ಭೂಮಿ ತೀರ್ಪು ನೀಡಿದ ಬೆಂಚ್ ಸದಸ್ಯರಾಗಿದ್ದ ಎಸ್.ಅಬ್ದುಲ್ ನಜೀರ್ ಅವರು ಜನವರಿ 14ರಂದು ನಿವೃತ್ತರಾಗಿದ್ದು, ಅವರು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ನ್ಯಾಯಾಲಯ ಸಂಕೀರ್ಣ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
1958ರ ಜನವರಿ 5ರಂದು ಮೂಡುಬಿದಿರೆಯ ಬೆಳುವಾಯಿ ಕಾನದಲ್ಲಿ ಜನಿಸಿದ ಅವರು ಮೂಡುಬಿದಿರೆ ಮಹಾವೀರ ಕಾಲೇಜಿನಲ್ಲಿ ಬಿ.ಕಾಂ ಪದವಿ, ಮಂಗಳೂರಿನ ಎಸ್ಡಿಎಂ ಲಾ ಕಾಲೇಜಿನಲ್ಲಿ ಎಲ್ಎಲ್ಬಿ ಪದವಿ ಪಡೆದಿದ್ದಾರೆ. 1983ರಲ್ಲಿ ವಕೀಲ ವೃತ್ತಿಯನ್ನು ಆರಂಭಿಸಿದ ಅವರು, 2003ರಲ್ಲಿ ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು.
ನಂತರ ಅವರು ಪೂರ್ಣಪ್ರಮಾಣದಲ್ಲಿ ನ್ಯಾಯಮೂರ್ತಿಯಾಗಿ ಭಡ್ತಿ ಹೊಂದಿದರು. ಹೈಕೋರ್ಟ್ ನ್ಯಾಯಾದೀಶರಾಗಿರುವಾಗಲೇ 2017ರಲ್ಲಿ ಅವರು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಂಡರು. 2017ರಲ್ಲಿ ತ್ರಿವಳಿ ತಲಾಕ್, 2019ರಲ್ಲಿ ಆಯೋಧ್ಯೆ ತೀರ್ಪು ಸಹಿತ ಮಹತ್ವದ ಪ್ರಕರಣಗಳಲ್ಲಿ ನ್ಯಾಯದಾನ ಮಾಡಿದ್ದಾರೆ. ಅಬ್ದುಲ್ ನಝೀರ್ ಅವರನ್ನು ಆಂಧ್ರಪ್ರದೇಶದ 3ನೇ ರಾಜ್ಯಪಾಲರಾಗಿ ರಾಷ್ಟ್ರಪತಿ ನೇಮಿಸಿದ್ದಾರೆ.
ಮಾಲತೇಶ್ ಅರಸ್ ಹರ್ತಿಕೋಟೆ. ನ್ಯೂಸ್ ಎಡಿಟರ್.